ಗೋವಾ ಕೇವಲ ತನ್ನಲ್ಲಿರುವ ಬೀಚ್ ಗಳಿಗಾಗಿ , ನೈಸರ್ಗಿಕ ಸೌಂದರ್ಯಕ್ಕಾಗಿ ಮತ್ತು ಅಲ್ಲಿಯ ವೈಭವೋಪ್ರೇತ ಜೀವನಶೈಲಿಯ ಕಾರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಗೋವಾ ಮೊದಲಿನಿಂದಲೂ ನಮ್ಮ ಅನೇಕ ಹಿಂದೂ ದೇವಾಲಯಗಳ ತಾಣ ಕೂಡ ಹೌದು. ಗೋವಾದ ದಟ್ಟ ಬೆಟ್ಟಗಳ ಸರಣಿಯಲ್ಲಿ ಇರುವಂತಹ ತ್ರೇತಾಯುಗದಲ್ಲಿ ಉದ್ಭವಗೊಂಡು ಭಗವಾನ್ ಪರಶುರಾಮರ ಕಾಲಘಟ್ಟದಲ್ಲಿ ಉಲ್ಲೇಖ ಇರುವ ಗೋವಾದ ಅತಿ ದೊಡ್ಡ ಮತ್ತು ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರಸಿದ್ಧವಾದ ಮಂಗೇಶ ದೇವಸ್ಥಾನದ ಪರಿಚಯವನ್ನು ಮಾಡಿಕೊಡುತ್ತೇನೆ.
ಎಲ್ಲಿದೆ ದೇವಸ್ಥಾನ? ತಲುಪುವುದು ಹೇಗೆ?
ಇನ್ನು ಈ ದೇವಸ್ಥಾನವನ್ನ ಹೇಗೆ ತಲುಪೋದು ಅಂತ ನೀವು ಯೋಚಿಸ್ತಾ ಇದ್ರೆ ಈ ದೇವಸ್ಥಾನ ಸ್ಥಿತವಾಗಿರುವುದು ಗೋವಾದ ಪೊಂಡಾ ಜಿಲ್ಲೆಯ ಪ್ರಿಯೋಲ್ ನ ಮಂಗೇಶಿ ಎಂಬ ಪುಟ್ಟ ಗ್ರಾಮದಲ್ಲಿ, ಇದು ಗೋವಾದ ವಾಸ್ಕೋಡಿಗಾಮ ರೈಲು ನಿಲ್ದಾಣದಿಂದ 37 ಕಿಲೋಮೀಟರ್ ಗೋವಾದ ರಾಜಧಾನಿಯಾದ ಪಣಜಿ ಬಸ್ ನಿಲ್ದಾಣದಿಂದ 21 ಕಿಲೋಮೀಟರ್ ಮತ್ತು ಗೋವಾದ ಪ್ರಮುಖ ನಗರ ಮಡಗಾವ್ ನಿಂದ 25 ಕಿಲೋಮೀಟರ್ ದೂರದಲ್ಲಿದೆ. ಇದು ಗೋವಾದ ಅತಿದೊಡ್ಡ ಹಾಗೂ ಹೆಚ್ಚು ಜನರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಒಂದಾಗಿದೆ.
ಶಿವಲಿಂಗ ಪೌರಾಣಿಕ ಚರಿತ್ರೆ
ಇನ್ನು ಈ ದೇವಸ್ಥಾನದ ಪೌರಾಣಿಕ ಚರಿತ್ರೆಯನ್ನು ನಾವು ಗಮನಿಸುವುದಾದರೆ ಇದು ನಮ್ಮನ್ನ ತ್ರೇತಾಯುಗಕ್ಕೆ ಕರೆದೊಯುತ್ತದೆ. ಒಮ್ಮೆ ಶಿವ ಮತ್ತು ಪಾರ್ವತಿ ಕೈಲಾಸದಲ್ಲಿ ಪಗಡೆ ಆಟವನ್ನು ಆಡ್ತಾರೆ. ಈ ಆಟದಲ್ಲಿ ಶಿವ ಪಾರ್ವತಿಯಿಂದ ಸೋಲ್ತಾನೆ. ಶಿವ ಇದರಿಂದ ಮನ ನೋಂದಂತೆ ವರ್ತಿಸಿ ಭೂಲೋಕಡೆದೆಗೆ ತನ್ನ ಪ್ರಯಾಣವನ್ನು ಬೆಳೆಸುತ್ತಾನೆ. ಕೆಲ ಸಮಯದ ನಂತರ ಪಾರ್ವತಿ ದೇವಿಯು ಶಿವನನ್ನ ಹುಡುಕುತ್ತಾ ಭೂಲೋಕದಡೆಗೆ ಹೋಗ್ತಾಳೆ.
ಶಿವ ಪಾರ್ವತಿಯನ್ನು ಪರೀಕ್ಷಿಸಲು ಒಂದು ಉಗ್ರವಾದ ಹುಲಿಯ ರೂಪವನ್ನು ಧರಿಸಿ ಪಾರ್ವತಿಯ ಮುಂದೆ ಬರುತ್ತಾನೆ. ಅಷ್ಟೊಂದು ಭೀಕರವಾದ ಹುಲಿ ಮತ್ತು ಅದರ ಗರ್ಜನೆಯಿಂದ ಭಯಬಿತಳಾದ ಪಾರ್ವತಿ ದೇವಿಯ ಬಾಯಿಂದ ಆಕೆಗೆ ಗೊತ್ತಿಲ್ಲದೆ "ತ್ರಾಹಿಮಾಮ್ ಗಿರೀಶ್" ಎಂಬ ಪ್ರಾರ್ಥನೆ ಬರತೊಡಗುತ್ತದೆ. ಇದರ ಅರ್ಥ ಓ ಬೆಟ್ಟಗಳ ದೇವತೆಯೇ ನನ್ನನ್ನು ಕಾಪಾಡು ಎಂದು.
ಪಾರ್ವತಿಯ ಈ ಕರೆಯನ್ನು ಆಲಿಸಿದಂತಹ ಶಿವ ತನ್ನ ಹುಲಿಯ ರೂಪವನ್ನು ತೊರೆದು ದರ್ಶನವನ್ನು ನೀಡುತ್ತಾನೆ ಮತ್ತು ನೀನು ನನ್ನನ್ನು ಕರೆದಂತ ಹೆಸರಿನಿಂದಲೇ ನಾನು ಇಲ್ಲಿ ನೆಲೆಸುವುದಾಗಿ ಶಿವ ಪಾರ್ವತಿಗೆ ಆಶೀರ್ವದಿಸುತ್ತಾನೆ. ಕಾಲಕ್ರಮೇಣ “ಮಾಮ್ ಗಿರೀಶ್” ಎಂಬ ಪದ ಮಾಂಗೀರಿಶ್ ಎಂದು ಪರಿವರ್ತನೆಯಾಗಿ ಮತ್ತು ಕಾಲಂತರದಲ್ಲಿ ಮಂಗೇಶ್ ಎಂಬ ಹೆಸರಿನಿಂದ ಮಾರ್ಪಾಡಾಯ್ತು. ಶಿವ ಪಾರ್ವತಿಯರು ಬಂದಿಳಿದ ಭೂಲೋಕದ ಆ ಪ್ರದೇಶವೇ ಗೋವಾದ ಆಗಿನ ಕುಶಾಸ್ಥಳ ಎಂಬ ಗ್ರಾಮ. ಅಂದು ಅಲ್ಲಿ ಉದ್ಭವವಾದ ಆ ಲಿಂಗವೇ ಈಗಿನ ಪ್ರಿಯೋಲ್ ಗ್ರಾಮದಲ್ಲಿರುವ ಮಂಗೇಶೀ ದೇವಸ್ಥಾನದ ಶಿವಲಿಂಗ.
ಭಗವಾನ್ ಪರಶುರಾಮ ಕೊಟ್ಟ ದಾನದ ಭೂಮಿ ಯಲ್ಲಿ ದೇವಸ್ಥಾನದ ನಿರ್ಮಾಣದ ರೋಚಕ ಕಥೆ
21 ಬಾರಿ ಕ್ಷತ್ರಿಯ ನಾಶವನ್ನು ಮಾಡಿದಂತಹ ಪರಶುರಾಮನು ಆ ರಕ್ತದ ಪಾಪದಿಂದ ಭೂಮಿಯನ್ನ ಶುದ್ಧಗೊಳಿಸಲು ಸೈಯಾದ್ರಿ ಪರ್ವತದಿಂದ ಸಮುದ್ರವನ್ನು ಹಿಂದುಡುತ್ತಾರೆ ಮತ್ತು ಯಜ್ಞದ ಸಂಕಲ್ಪವನ್ನು ಮಾಡುತ್ತಾರೆ. ಈ ಯಜ್ಞಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಪ್ರದೇಶ ಉತ್ತರ ಭಾರತದ ತಿಹೋತ್ರ (ಇದು ಈಗಿನ ಬಿಹಾರದ ಚಂಪಾರಣ ಎಂಬ ಕ್ಷೇತ್ರವಾಗಿ ಮಾರ್ಪಟ್ಟಿದೆ).
ಈ ಯಜ್ಞದ ಸಂಕಲ್ಪ ಪೂರ್ತಿಗೊಳಿಸಲು 10 ಗೋತ್ರದ ಬ್ರಾಹ್ಮಣ ಸಮುದಾಯವನ್ನು ಆಹ್ವಾನಿಸುತ್ತಾರೆ. ಈ ಆಹ್ವಾನಿತ ಬ್ರಾಹ್ಮಣರ ಕುಲದಲ್ಲಿ ವತ್ಸಗೋತ್ರದ ಲೋಮ ಶರ್ಮ ಮತ್ತು ಕೌಂಡಿಂನ್ಯ ಗೋತ್ರದ ಶಿವಶರ್ಮ ಇಬ್ಬರೂ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ಯಜ್ಞ ಮುಗಿದ ನಂತರ ಸಂಪೂರ್ಣ ಭೂಮಿಯನ್ನು ಈ ಬ್ರಾಹ್ಮಣ ಸಮುದಾಯಕ್ಕೆ ದಾನವಾಗಿ ನೀಡಿದ ಪರಶುರಾಮರು ತಪಸ್ಸನ್ನ ಆಚರಿಸಲು ಹೊರಟು ಹೋಗ್ತಾರೆ. ಹೀಗೆ ದಾನವಾಗಿ ಪಡೆದ ಭೂಮಿಯಲ್ಲಿ ಗೋವೆಯ ಕುತಾಲ್ ಸುತ್ತಮುತ್ತಲಿನ ಗ್ರಾಮಗಳು ಸೇರಿದ್ದರಿಂದ ಇವರಿಬ್ಬರೂ ಅಲ್ಲಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಬಂದು ನೆಲೆಸುತ್ತಾರೆ.
ಶಿವಶರ್ಮ ಅಪ್ಪಟ ಶಿವ ಭಕ್ತನಾಗಿದ್ದು ಅವನು ಈ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ನಂತರ ಒಂದು ಅಚ್ಚರಿಯ ಸಂಗತಿ ಒಂದು ಎದುರಾಗುತ್ತದೆ. ಅವನ ಕನಸಿನಲ್ಲಿ ಭಗವಾನ್ ಶಿವನು ಬಂದು ನಿನ್ನ ಭಕ್ತಿಗೆ ತಾನು ಮೆಚ್ಚಿರುವುದಾಗಿ ಮತ್ತು ನಿನ್ನ ಸಮೀಪದಲ್ಲಿ ನಾನು ಪ್ರತ್ಯಕ್ಷ ವಾಗುವುದಾಗಿ ತಿಳಿಸುತ್ತಾನೆ. ಒಂದು ದಿನ ಇವನ ಗೋಪಾಲಕರಲ್ಲೊಬ್ಬ ಒಂದು ಹಸುವನ್ನು ಹಿಂಬಾಲಿಸುತ್ತಾ ಹೋಗಲಾಗಿ ಆ ಹಸು ಕಾಡಿನಲ್ಲಿ ಒಂದು ಪ್ರದೇಶದಲ್ಲಿ ಹಾಲನ್ನು ಎರೆಯುತ್ತಿರುವ ದೃಶ್ಯ ಅವನ ಕಣ್ಣಿಗೆ ಬೀಳುತ್ತದೆ. ಈ ದೃಶ್ಯವನ್ನು ಗಮನಿಸಿದ ಅವನಿಗೆ ಅಚ್ಚರಿಯ ಆಭಾಸವಾಗುತ್ತದೆ ಏಕೆಂದರೆ ಆ ಹಸುವಿಗೆ ಯಾವುದೇ ಕರು ಇರುವುದಿಲ್ಲ ಈ ವಿಷಯವನ್ನು ತನ್ನ ಯಜಮಾನನಾದ ಶಿವಶರ್ಮರಲ್ಲಿ ಬಂದು ಹೇಳುತ್ತಾನೆ. ಆಗ ಶಿವ ಶರ್ಮರು ತನ್ನ ಕನಸು ಮತ್ತು ಈ ವಿಚಾರ ಎರಡನ್ನು ತಾಳೆ ಹಾಕಿ ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಸ್ವಯಂಭು ಲಿಂಗ ಕಾಣಸಿಗುತ್ತದೆ. ಅಲ್ಲಿ ಒಂದು ಪುಟ್ಟದಾದ ಗುಡಿಯನ್ನು ನಿರ್ಮಿಸಿ ಅದಕ್ಕೆ ಅಂದಿನಿಂದ ಪೂಜೆ ಮಾಡಲು ಪ್ರಾರಂಭಿಸಲಾಗುತ್ತದೆ.
ಪೋರ್ಚುಗೀಸರ ದಾಳಿ ಮತ್ತು ದೇವಸ್ಥಾನ ಸ್ಥಳಾಂತರ
1543ರಲ್ಲಿ ಆಕ್ರಮಣಕಾರಿ ಪೋರ್ಚುಗೀಸರು, ಗೋವಾ ವನ್ನ ವಶಪಡಿಸಿಕೊಂಡ ನಂತರ ಅವರು ಅಲ್ಲಿ ಕ್ರೈಸ್ತೀಕರಣವನ್ನು ಪ್ರಾರಂಭಿಸುತ್ತಾರೆ. ಇವರ ಮತಾಂಧತೆಯಿಂದ ಬೇಸತ್ತ ಮುಳುಕೇಶ್ವರ (ವತ್ಸ ಗೋತ್ರದ ಯುವಕ ಈತನ ಪ್ರತಿಮೆಯನ್ನು ದೇವಸ್ಥಾನದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ) ಎಂಬ ಯುವಕ ಈ ಲಿಂಗವನ್ನು ಕುಶಾಸ್ಥಳದಿಂದ ಈಗ ದೇವಸ್ಥಾನವಿರುವ ಜಾಗಕ್ಕೆ ತಂದಿರುವುದಾಗಿ ಉಲ್ಲೇಖ ಇದೆ. ಈತನು ಇಲ್ಲಿ ಈ ಲಿಂಗವನ್ನು ತಂದ ತಂಡ ದಿನ ಕಾರ್ತಿಕ ಶುದ್ಧ ದ್ವಾದಶಿ ತಿಥಿ (ಅಂದರೆ ತುಳಸಿ ಹಬ್ಬ).
ಆದರೆ ದೇವಸ್ಥಾನವನ್ನು ಕಟ್ಟಿ ಲಿಂಗವನ್ನು ಪುನರ್ ಪ್ರತಿಷ್ಟಾಪನೆ ಮಾಘ ಶುದ್ಧ ಪೂರ್ಣಿಮೆಯ ದಿನ ಮಾಡಲಾಗುತ್ತದೆ. ಮುಂದೆ ಮರಾಠರ ಆಳ್ವಿಕೆಯಲ್ಲಿ ಇದಕ್ಕೆ ಇಂಡೋ ಇಸ್ಲಾಮಿಕ್ ಮತ್ತು ಪೋರ್ಚುಗಲ್ ಮಿಶ್ರ ಶೈಲಿಯ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ. 1973ರಲ್ಲಿ ಬಂಗಾರದ ಕಳಶವನ್ನು ಇದರ ಮೇಲೆ ಪ್ರತಿಷ್ಠಾಪನೆ ಮಾಡಿದ್ದು ಹೊಸದಾಗಿ ಆದ ಜೀರ್ಣೋದ್ಧಾರ.








No comments:
Post a Comment